‘ಪುನೀತ್ ನಮನ’ಕ್ಕೆ ಸಜ್ಜಾಗಿದೆ ಅದ್ಧೂರಿ ವೇದಿಕೆ..
ನಟ ಪುನೀತ್ ರಾಜ್ಕುಮಾರ್ ಅವರಿಗೆ ಚಿತ್ರರಂಗದ ಪರವಾಗಿ ನಮನ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ನವೆಂಬರ್ 16) ಅರಮನೆ ಮೈದಾನದಲ್ಲಿ ‘ಪುನೀತ ನಮನ’ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇಂದು, ಚಿತ್ರ ಪ್ರದರ್ಶನ ಹೊರತುಪಡಿಸಿ, ಚಿತ್ರೋದ್ಯಮದ ಮತ್ತೆಲ್ಲಾ ಕೆಲಸಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ. ಕಾರ್ಯಕ್ರಮದ ಸಲುವಾಗಿ ಅದ್ದೂರಿ ವೇದಿಕೆಯನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮದ ರೂಪುರೇಷೆಯನ್ನು ವಾಣಿಜ್ಯ ಮಂಡಳಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಿನ ಮೂಲಕ ಅಪ್ಪುಗೆ ಗೀತ ನಮನ ಸಲ್ಲಿಸಲಾಗುತ್ತದೆ. ಅಪ್ಪು ಸಿನಿಮಾ ಜರ್ನಿ ಮತ್ತು ಸಾಮಾಜಿಕ ಎರಡೂ ವಿಚಾರಗಳನ್ನ ಸೇರಿಸಿ 5 ನಿಮಿಷದ ಹಾಡನ್ನು ತಯಾರಿಸಲಾಗಿದೆ. ಹಲವು ಗಾಯಕ, ಗಾಯಕಿಯರು ವೇದಿಕೆ ಮೇಲೆ ಅಪ್ಪು ಹಾಡುಗಳ ಹಾಡುವ ಮೂಲಕ ನಮನ ಸಲ್ಲಿಸಲಿದ್ದಾರೆ. ವೇದಿಕೆ ಮೇಲೆ ಯಾವುದೇ ಕುರ್ಚಿಗಳು ಇರುವುದಿಲ್ಲ ಬದಲಾಗಿ, ಕೇವಲ ಎಲ್ ಇ ಡಿ ವಾಲ್ ಇರಲಿದೆ. 10 ನಿಮಿಷಗಳ ಕಾಲ ಅಪ್ಪು ಜರ್ನಿಯ ಬಗ್ಗೆ ಎವಿ ಮಾಡಲಾಗಿದೆ.

ಅಪ್ಪು ಬಗ್ಗೆ ಸ್ಟಾರ್ ನಟರು ತಮ್ಮ ಒಡನಾಟವನ್ನು ಹಂಚಿಕೊಳ್ಳಲಿದ್ದಾರೆ. ಎಲ್ಲರೂ ಒಂದೆರಡು ನಿಮಿಷ ಪುನೀತ್ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಮಾಹಿತಿ ನೀಡಿದ್ದಾರೆ. ನಟ ಪುನೀತ್ ಸಿನಿಮಾಗಳ ಹಾಡಿನ ಮೂಲಕ ನಮನ ಸಲ್ಲಿಸಲಾಗುತ್ತಿದ್ದು, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಾಧು ಕೋಕಿಲ, ಮಂಜುಳಾ ಗುರುರಾಜ್, ಹೇಮಂತ್, ಅನುರಾಧಾ ಭಟ್, ಸುನಿತಾ, ಇಂದು ನಾಗರಾಜ್, ಚೈತ್ರಾ, ಶಮಿತಾ ಮಲ್ನಾಡ್ ಸ್ವರಾಭಿಷೇಕ ನಡೆಸಿಕೊಡಲಿದ್ದಾರೆ.
