ಯಾಕಿಷ್ಟು ಆತುರವಾಯಿತು ಅಪ್ಪು..?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಾಯಾಘಾತಕ್ಕೊಳಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪು ಚಿಕಿತ್ಸೆ ಫಲಕಾರಿಯಾಗದೆ ಇಹ ಲೋಕ ತ್ಯಜಿಸಿದ್ದಾರೆ. ನಟ ಪುನೀತ್ ವಿಕ್ರಂ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲೆಡೆಯಿಂದ ಅವರ ಅಭಿಮಾನಿಗಳು ಆಸ್ಪತ್ರೆಯೆದುರು ಜಮಾಯಿಸಿದ್ರು. ಒಂದು ಬಾರಿಯಾದ್ರೂ ಅಪ್ಪುರನ್ನು ನೋಡಬೇಕು ಅಂತ ಗಳ ಗಳನೆ ಕಣ್ಣೀರಿಡುತ್ತಿದ್ದಾರೆ. ಇನ್ನು ಯಾರೂ ನಿರೀಕ್ಷೆ ಮಾಡದ ಸುದ್ದಿ ತಿಳಿದ ಇಡೀ ಕರುನಾಡಿನ ಜನತೆ ಕಂಬನಿ ಮಿಡಿಯುತ್ತಿದೆ.
ಪುನೀತ್ ರಾಜಕುಮಾರ್ ಅವರ ಈ ಅಸಹಜ ಸಾವನ್ನ ಅವರ ಅಭಿಮಾನಿಗಳಿಗೆ ಇನ್ನು ಕೂಡ ನಂಬಲಾಗುತ್ತಿಲ್ಲಾ, ವಯಸ್ಸಲ್ಲದ ವಯಸ್ಸಲ್ಲಿ ಪುನೀತ್ ಅವರ ಜೀವದ ಜೊತೆ ಆಟವಾಡಿದೆ ಆ ಕೆಟ್ಟ ವಿಧಿ, ನಾಡಿನ ಬಹುತೇಕ ಮನೆಗಳಲ್ಲಿ ತಮ್ಮ ಮನೆ ಮಗನನ್ನೆ ಕಳೆದುಕೊಂಡಿರುವಂತೆ ನೋವಿನಲ್ಲಿ ನರಳುತ್ತಿದ್ದಾರೆ, ಯುವಕರು ತಮ್ಮ ಪ್ರೀತಿ ಅಣ್ಣನ್ನ ಕಳೆದುಕೊಂಡಿರುವಂತೆ ರೋದಿಸುತಿದ್ದಾರೆ. ಯಾರಲ್ಲೂ ಹೇಳಿಕೊಳ್ಳಲಾಗದ ದುಃಖ ಎಲ್ಲರಲ್ಲಿಯೂ ಮಡುಗಟ್ಟಿದೆ. ಇದಕ್ಕೆ ಕಾರಣ ಪುನೀತ್ ಅವರ ವ್ಯಕ್ತಿತ್ವ ಮತ್ತು ಅವರು ನಟಿಸಿದ ಚಿತ್ರಗಳು ಇಂತಹದೊಂದು ನೋವಿಗೆ ದೂಡಿದೆ ಅದೆಲ್ಲಕ್ಕೂ ಮಿಗಿಲಾಗಿ ಪ್ರತಿ ದಿನ ದೇಹವನ್ನು ಹೆಚ್ಚು ಆರೋಗ್ಯವಾಗಿಟ್ಟುಕೊಳ್ಳಲ್ಲು ಮಾಡುತ್ತಿದ್ದ ಕಸರತ್ತುಗಳು ಎಲ್ಲರಿಗೂ ಮಾದರಿ ಎನ್ನುವಂತಿತ್ತು ಇನ್ನು ಸಾಯುವಂತಹ ವಯಸ್ಸು ಕೂಡ ಆಗಿರಲಿಲ್ಲಾ (46) ಈ ಎಲ್ಲಾ ಕಾರಣಗಳಿಂದಾಗಿ ಕರುನಾಡು ಒಬ್ಬ ಮಗನನ್ನು ಕಳೆದುಕೊಂಡವರಂತೆ ವೇದನೆ ಪಡುತ್ತಿದೆ.

ಪುನೀತ್ ಅವರ ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯಗಳು ಹೆಚ್ಚು ಮನ ಮುಟ್ಟುವಂತಿದ್ದವು, ಅದು ತಂದೆ ಮಗನ ಸಂಬಂಧ, ತಾಯಿ ಮಗನ ಸೆಂಟಿಮೆಂಟ್ , ಗಂಡ ಹೆಂಡತಿಯ ಪಾತ್ರ, ಸ್ನೇಹಿತನಾಗಿ ಅವರು ನಿರ್ವಹಿಸಿರುವ ಪಾತ್ರಗಳು ಪ್ರತಿಯೊಬ್ಬರ ಬದುಕಿಗೂ ಸಂಬಂಧಿಸಿದ್ದರಿಂದ ಪುನೀತ್ ಸಿನಿಮಾಗಳೆಂದರೆ ಹೆಣ್ಣು ಮಕ್ಕಳಿಗೆ ತುಂಬಾ ಫೇವರ್. ತಮ್ಮ ತಂದೆ ಡಾ ರಾಜಕುಮಾರ್ ಹಾದಿಯಲ್ಲೆ ಸಾಗುತ್ತಿದ್ದ ವ್ಯಕ್ತಿತ್ವ ಅಪ್ಪು ಅವ್ರದ್ದು, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಾ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಪಾರ್ವತಮ್ಮ ರಾಜಕುಮಾರ್ ಅಕಾಡೆಮಿ ಮೂಲಕ ಕೊಡುಗೆಗಳನ್ನು ನೀಡುತ್ತ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳ ಬದುಕಿಗೆ ಆಶಾಕಿರಣದಂತೆ ಕಾರ್ಯ ನಿರ್ವಹಿಸಿದ್ರು. ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಮೂಲಕ ಹಲವು ಪ್ರತಿಭೆಗೆ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಬುನಾದಿ ಹಾಕಿಕೊಟ್ಟಿದ್ದರು ಪುನೀತ್. ಪುನೀತ್ ತಾಯಿಯವರು ಸ್ಥಾಪಿಸಿದ ಮೈಸೂರಿನ ಶಕ್ತಿಧಾಮವನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವ ಮೂಲಕ ಅಬಲೆಯರಿಗೆ ಶಕ್ತಿಯಾಗಿದ್ದರು.ಇವೆಲ್ಲವನ್ನು ಕಂಡು ಸಹಿಸಲಾಗದ ವಿಧಿ ಅವರನ್ನು ಮತ್ತೆ ಬಾರದ ಲೋಕಕ್ಕೆ ಕೊಂಡ್ಯೊದಿದೆ ಕರುನಾಡ ಪ್ರೀತಿಯ ಮನೆ ಮಗ ಅಪ್ಪು ಇನ್ನು ನೆನಪು ಮಾತ್ರ.

ಪುನೀತ್ ಅವರ ಹಿರಿಯ ಪುತ್ರಿ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ಅವರು ಭಾರತದಲ್ಲಿ ಇರಲಿಲ್ಲ.. ತಂದೆಯ ಸಾವು ಆ ಮಗುವಿಗೆ ಅದೇಷ್ಟು ಕಾಡುವುದೋ.. ಕೊನೆಯದಾಗಿ ಅಪ್ಪುವಿನಿಂದ ಒಂದು ಪ್ರೀತಿಯ ಅಪ್ಪುಗೆ, ಸಿಹಿ ಮುತ್ತು, ಮುದ್ದು, ಕನಿಷ್ಠ ಮಗಳೇ ಎಂಬ ಶಬ್ಧ ಕೇಳಲಾಗದ ಆ ಪುಟ್ಟ ಜೀವಕ್ಕೆ ಕೊನೆ ಕ್ಷಣದವರೆಗೆ ಈ ಸಂಕಟ ಕರುಳ ಹಿಂಡಲಿದೆ. ಡಾ. ರಾಜ್ ಕುಮಾರ್ ಅವರ ಸಾವಿನ ಸಂದರ್ಭದಲ್ಲಿಯೂ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ಶೂಟಿಂಗ್ ಸಲುವಾಗಿ ವಿದೇಶದಲ್ಲಿದ್ದರು. ಅಪ್ಪನನ್ನ ಅಂತಿಮ ಸಂಸ್ಕಾರಕ್ಕೆ ಕೆಲವೇ ನಿಮಿಷಗಳಿದ್ದಾಗ ಪಾರ್ಥಿವ ಶರೀರವನ್ನು ನೋಡುವಂತಾಗಿತ್ತು ಅಂದಿನ ಸಂದರ್ಭ.. ಅದೇ ಕುಟುಂಬದಲ್ಲಿ ಮತ್ತೊಮ್ಮೆ ಅಂತಹುದೇ ಘಟನೆ ನಡೆದು ಬಿಟ್ಟಿತ್ತಲ್ಲ ಎಂಬುದು ನೋವನ್ನ ಹಿಮ್ಮಡಿಸಿದೆ.
****