ನಾಗತೀಹಳ್ಳಿ ಟೆಂಟ್ ಸಿನಿಮಾ ಸ್ಕೂಲ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ‘ಹಳ್ಳಿ ಮೇಷ್ಟ್ರು’
ಸ್ಯಾಂಡಲ್ ವುಡ್ ಕುಟುಂಬದ ಎಲ್ಲಾ ಕಲಾವಿದರಿಗೂ ನೆಚ್ಚಿನ ಮೇಷ್ಟ್ರು ಎಂದೇ ನಾಮಾಂಕಿತವಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದ ಟೆಂಟ್ ಸಿನಿಮಾ ಪಾಠಶಾಲೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರುವಂತ ಪ್ರತಿಭೆಗಳಿಗೆ ದಾರಿದೀಪವಾಗಿದೆ. ಸಿನಿ ಇಂಡಸ್ಟ್ರಿಯಲ್ಲಿ ನಟನೆ, ನಿರ್ದೇಶನ, ಬರವಣಿಗೆ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಳ್ಳಲು ಕನಸ್ಸನ್ನು ಕಟ್ಟಿಕೊಂಡು ಗಾಂಧಿ ನಗರಕ್ಕೆ ಬಂದಿರುತ್ತಾರೆ, ಆದರೆ ಕೆಲವೊಮ್ಮೆ ಸರಿಯಾದ ಕಲಿಕೆ ಮಾರ್ಗದರ್ಶನ ಇರುವುದಿಲ್ಲಾ ಅಂತವ್ರಿಗೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ‘ಟೆಂಟ್ ಸಿನಿಮಾ ಶಾಲೆ’ಯಲ್ಲಿ ಸಿನಿಮಾ ಕಾರ್ಯಗಾರ ನಡೆಯುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿ ಚಿತ್ರ ನಿರ್ಮಾಣದ ಕುರಿತು ಅನುಭವಿ ತಂತ್ರಜ್ಞ-ಕಲಾವಿದರಿಂದ ತರಬೇತಿ ನೀಡಲಾಗುತ್ತದೆ.

ಆಗಸ್ಟ್ 29 ರಂದು ಭಾನುವಾರ ಟೆಂಟ್ ಸಿನಿಮಾ ಶಾಲೆಯಲ್ಲಿ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಟೆಂಟ್ ಸಿನಿಮಾದ ವಿದ್ಯಾರ್ಥಿಗಳೊಂದಿಗೆ ತಮ್ಮ ಸಿನಿಮಾ ಜರ್ನಿಯ ಅನುಭವ ಹಂಚಿಕೊಂಡರು. ಚಿತ್ರರಂಗ ಅಂದ್ರೆ ಏನು? ಸಿನಿಮಾ ಹಿಂದಿನ ಶ್ರಮ, ಸಿನಿಮಾ ಉದ್ದೇಶ ಏನಾಗಿರಬೇಕು ಎಂಬ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಕೊಟ್ಟರು. ಕನಸುಗಾರ ರವಿಚಂದ್ರನ್ ಅವರು ಟೆಂಟ್ ಸಿನಿಮಾ ಪಾಠಶಾಲೆಗೆ ಬಂದು ವಿಧ್ಯಾರ್ಥಿಗಳಿಗೆ ಪಾಠ ಮಾಡಿರುವ ಸ್ಟಿಲ್ಸ್ ಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಶೇರ್ ಮಾಡಿ ರವಿ ಸರ್ ಗೆ ಧನ್ಯವಾದ ತಿಳಿಸಿದ್ದಾರೆ.

”ಅವರು ಜೀವನ ಎಂಬ ವಿಶ್ವವಿದ್ಯಾಲಯದಲ್ಲಿ ಅದ್ಭುತ ಶಿಕ್ಷಕರು. ತಮ್ಮ ಸಿನಿ ಪಯಣದ ಸಹಜ ಮತ್ತು ಆಳವಾದ ಅನುಭವದ ಮಾತುಗಳಿಂದ ಹೃದಯಗಳನ್ನು ಮುಟ್ಟಿದರು. ನನಗೆ ಮತ್ತು ನಮ್ಮ ಟೆಂಟ್ ಸಿನಿಮಾ ವಿದ್ಯಾರ್ಥಿಗಳಿಗೆ ಭಾನುವಾರವನ್ನು ಅತ್ಯಂತ ವಿಶೇಷವಾಗಿರಿಸಿದರು. ರವಿಚಂದ್ರನ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ನಾಗತಿಹಳ್ಳಿ ಚಂದ್ರಶೇಖರ್ ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
****