ಡೈಲಾಗ್ ರೈಟರ್ ಈಗ ಡೈರೆಕ್ಟರ್‌

ಚಂದನವನದಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಪ್ರಶಾಂತ್ ರಾಜಪ್ಪ. ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಅನುಭವ ಹೊಂದಿರೋ ಪ್ರಶಾಂತ್‌ ನಿರ್ದೇಶಕನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್. ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.

‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಸಿನಿಮಾ ಖ್ಯಾತಿಯ ನಟ ರಿಷಿ ಪ್ರಶಾಂತ್ ರಾಜಪ್ಪ ಮೊದಲ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲವನ್ನೂ ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ತಿಳಿಸಿದ್ದಾರೆ.

Exit mobile version