ಕನ್ನಡದಲ್ಲಿ ನಾಯಕನಾಗಿ, ಖಳನಾಯಕನಾಗಿ ನಟನೆ ಮಾಡಿರುವ ವಜ್ರಾಂಗ್ ಶೆಟ್ಟಿ ಕಳೆದ ವಾರ ಮತ್ತೊಂದು ಹೊಸ ಹೆಜ್ಜೆ ಹಾಕಿದ್ದಾರೆ. ತಮಿಳುನಾಡಿನ ಖ್ಯಾತ ನಟ ವಿಜಯ್ ದಳಪತಿಯವರ ಕೊನೆಯ ಚಿತ್ರದಲ್ಲಿ ಕಂಗೊಳಿಸಿದ್ದಾರೆ.

ಕಳೆದವಾರ ತೆರೆಕಂಡ ಜನನಾಯಗನ್ ಕನ್ನಡಿಗರ ಪಾಲಿಗೆ ಹೊಸ ಅಚ್ಚರಿ ತಂದುಕೊಟ್ಟಿತ್ತು. ಚಿತ್ರದಲ್ಲಿ ಬಾಬ್ಬಿ ಡಿಯೋಲ್ ಬಳಿಕ ಪ್ರಮುಖ ಖಳ ಪಾತ್ರದಲ್ಲಿ ಕನ್ನಡದ ವಜ್ರಾಂಗ್ ಶೆಟ್ಟಿ ಕಾಣಿಸಿದ್ದರು. ಜನನಾಯಗನ್ ನಲ್ಲಿ ಇವರ ನಟನೇಗೆ ಕಾಲಿವುಡ್ ಮಂದಿ ನಿಬ್ಬೆರಗಾಗಿದ್ದಾರೆ ಮತ್ತು ದಳಪತಿ ವಿಜಯ ಅವರ ಕೊನೆಯ ಚಿತ್ರದಲ್ಲಿ ವಜ್ರಾಂಗ್ ಮತ್ತು ವಿಜಯ ಅವರ ಮಾಸ್ ಫೈಟ್ ತಮಿಳುನಾಡಿನ ಸೋಶಿಯಲ್ ಮಿಡಿಯಾಗಳಲ್ಲಿ ಟ್ರೆಂಡಿಂಗ್ ನಲ್ಲಿದೆ.

ಮೂಲತಃ ಕುಂದಾಪುರದವರಾದ ಮಣಿ ಶೆಟ್ಟಿ, ಕನ್ನಡ ಸಿನಿಮಾರಂಗದಲ್ಲಿ ವಜ್ರಾಂಗ್ ಶೆಟ್ಟಿ ಎಂದೇ ಗುರುತಿಸಿಕೊಂಡವರು. 2014ರಲ್ಲಿ ಮಿಸ್ಟರ್ ಕುಂದಾಪುರ ಬಿರುದು ಪಡೆದ ಇವರು 6.3″ ಎತ್ತರವಾದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿರುವಂಥ ಚೆಲುವ. ಹೀಗಾಗಿಯೇ ನಾಯಕ, ಖಳನಾಯಕ ಎರಡು ಮಾದರಿಯ ಪಾತ್ರಗಳನ್ನು ಕೂಡ ಆವಾಹಿಸಿಕೊಂಡು ಹೆಸರಾಗಿದ್ದಾರೆ.

ವಿನಯ್ ರಾಜ್ ಕುಮಾರ್ ನಾಯಕರಾಗಿ ಎಂಟ್ರಿ ನೀಡಿದ ‘ಸಿದ್ದಾರ್ಥ’ ಚಿತ್ರದಲ್ಲಿ ಖಳನಾಯಕನಾಗಿ ವಜ್ರಾಂಗ್ ಶೆಟ್ಟಿಯ ಚಿತ್ರರಂಗ ಪ್ರವೇಶವಾಗಿತ್ತು. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು ಖಂಡಿತವಾಗಿ ಹೆಸರು ಮಾಡುತ್ತಾರೆ ಎನ್ನುವ ಮಾತಿದೆ. ಅದಕ್ಕೆ ವಜ್ರಾಂಗ್ ಶೆಟ್ಟಿ ಕೂಡ ಪ್ರಮುಖ ಉದಾಹರಣೆ.

ವಜ್ರೇಶ್ವರಿ‌ ಕಂಬೈನ್ಸ್ ನಲ್ಲಿ ಎಂಟ್ರಿಕೊಟ್ಟ ಬಳಿಕ ‘ಮಂತ್ರಂ’ ಚಿತ್ರದಲ್ಲಿ ನಾಯಕನಾದರು. ‘ಬಬ್ಲುಷಾ’ದಲ್ಲಿಯೂ ಇವರದೇ ನಾಯಕತ್ವ ಇತ್ತು.ಪ್ರಜ್ವಲ್ ದೇವರಾಜ್ ನಟನೆಯ ‘ಮಾದ ಮತ್ತು ಮಾನಸಿ’ ಚಿತ್ರದಲ್ಲಿ ಎರಡನೇ ನಾಯಕ ಇವರೇ ಆಗಿದ್ದರು. ಇದಲ್ಲದೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾದ ಜೇಮ್ಸ್ ನಲ್ಲಿ ಕೂಡ ಪ್ರತಾಪ್ ಅರಸ್ ಎನ್ನು ಖಳ ಪಾತ್ರ ಮಾಡಿದ್ದರು.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ವಜ್ರಾಂಗ್ ಶೆಟ್ಟಿ, ವಿಷ್ಣು ಎನ್ನುವ ಖಳ‌ಪಾತ್ರವನ್ನು ನಿಭಾಯಿಸಿ ಟಾಲಿವುಡ್ ನಲ್ಲಿ ಗಮನ ಸೆಳೆದಿದ್ದರು. ಪ್ರಭಾಸ್ ಮಧ್ಯನಡೆಯುವ ಕಾಟೇರಮ್ಮ ಫೈಟ್ ಇಂದಿಗೂ ಟಾಲಿವುಡ್ ಅಂಗಳದಲ್ಲಿ ಟ್ರೇಡಿಂಗ್ ನಲ್ಲಿದೆ.

ಇದೀಗ ವಿಜಯ್ ಅವರ ಬಹುನಿರೀಕ್ಷಿತ ಜನನಾಯಗನ್ ಇವರನ್ನು ತಮಿಳಿಗೂ ಪರಿಚಯಿಸಿದೆ. ಎಲ್ಲ ಕಡೆ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಿರುವ ವಜ್ರಾಂಗ್ ಶೆಟ್ಟಿ ಜನನಾಯಗನ್ ಮೂಲಕ ವಿಜಯದ ಪತಾಕೆ ಹಾರಿಸುತ್ತಿರುವುದಂತೂ ಸತ್ಯ.

Written By
Kannada Picchar

Leave a Reply

Your email address will not be published. Required fields are marked *