ಅಂಬರೀಶ್ ಪುಣ್ಯತಿಥಿ: ಮುಖ್ಯಮಂತ್ರಿ ಸೇರಿ ಗಣ್ಯರಿಂದ ಸ್ಮರಣೆ!
ಹಿರಿಯ ನಟ ಅಂಬರೀಶ್ ಅವರು 2018 ರ ನವೆಂಬರ್ 24ರಂದು ನಿಧನರಾದರು. ಅವರು ಎಲ್ಲರನ್ನೂ ಅಗಲಿ ಮೂರು ವರ್ಷ ಕಳೆದಿದೆ. ಇಂದು (ನವೆಂಬರ್ 24) ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಅಂಬಿ ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ.
“ಜನಪ್ರಿಯ ಕಲಾವಿದ, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್, ಮಾಜಿ ಕೇಂದ್ರ ಸಚಿವ ಶ್ರೀ ಅಂಬರೀಶ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಹಲವಾರು ಯಶಸ್ವಿ ಚಲನಚಿತ್ರಗಳ ಜೊತೆಗೆ ತಮ್ಮ ವಿಶಿಷ್ಟ ನಡೆ, ನುಡಿ, ವ್ಯಕ್ತಿತ್ವಗಳಿಂದ ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಅಂಬಿ ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು, ಆಪ್ತರು ಅಂಬರೀಷ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ನಟ ದರ್ಶನ್ ಅವರಿಗೆ ಅಂಬರೀಶ್ ಅವರನ್ನು ಕಂಡರೆ ವಿಶೇಷ ಪ್ರೀತಿ. ಇಬ್ಬರ ನಡುವೆ ವಿಶೇಷ ಅನುಬಂಧ ಇತ್ತು. ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ ದರ್ಶನ್. ಅಷ್ಟೇ ಅಲ್ಲ ಟ್ವಿಟರ್ನಲ್ಲಿ ಅಂಬರೀಶ್ ಅವರನ್ನು ನೆನೆದು ಫೊಟೋ ಹಂಚಿಕೊಂಡಿದ್ದಾರೆ. “ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ವಿಶೇಷ ಮಾರ್ಗದರ್ಶಕರಾಗಿ, ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಜೊತೆಗೆ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ದರ್ಶನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ
ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಇಂದು(ನವೆಂಬರ್ 24) ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೊಗೆ ಬೆಳಗ್ಗೆ ಕುಟುಂಬಸ್ಥರೊಂದಿಗೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಆಗಮಿಸಿ ಪೂಜಾ ಕಾರ್ಯ ಆರಂಭಿಸಿದರು. ನಟ ದರ್ಶನ್ ಕೂಡ ಪ್ರತೀ ಬಾರಿ ಅಂಬಿ ಪೂಜೆಯಲ್ಲಿ ಭಾಗಿ ಆಗುತ್ತಾರೆ. ಅಂತಯೇ ಇಂದು ಕೂಡ ಅಂಬಿ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಜೊತೆಗೆ ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿ ಆಗಿದ್ದಾರೆ.
****