News

ಮಾಲಿವುಡ್ ಅಂಗಳದಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕನ ದರ್ಬಾರ್..!

ಮಾಲಿವುಡ್ ಅಂಗಳದಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕನ ದರ್ಬಾರ್..!
  • PublishedDecember 3, 2021

ಸಿನೆಮಾ ನಿರ್ಮಾಪಕ ಎಂದರೆ ಚಿತ್ರಕ್ಕೆ ಬಂಡವಾಳ ಹಾಕಿ, ಚಿತ್ರ ಬಿಡುಗಡೆ ನಂತರ ಲಾಭ ಗಳಿಸುವುದಷ್ಟೇ ನಿರ್ಮಾಪಕನ ಗುರಿಯಾದರೆ ಆತ ನಿಜಕ್ಕೂ ಸೃಜನಶೀಲ ನಿರ್ಮಾಪಕನಾಗಲಾರ, ಒಬ್ಬ ನಿರ್ಮಾಪಕನಾದವನು ಸಿನಿಮಾವನ್ನ ವ್ಯಾಪಾರ ಮನೋಭಾವ ದಿಂದಷ್ಟೇ ನೋಡದೆ ಸಿನಿಮಾವನ್ನ ಒಂದು ಪ್ಯಾಶನ್ ರೀತಿ ನೋಡಬೇಕು, ಸಿನೆಮಾವನ್ನ ಪ್ರೀತಿಸಬೇಕು, ಸಿದ್ದ ಸೂತ್ರಗಳಿಗೆ ಜೋತು ಬಿದ್ದು ಚಿತ್ರ ನಿರ್ಮಾಣ ಮಾಡುವುದನ್ನು ಬಿಡಬೇಕು, ಸಿನಿಮಾ ಪ್ರಪಂಚದ ವ್ಯಾಪ್ತಿಯನ್ನು ಗ್ರಹಿಸಿರಬೇಕು ಆಗ ಮಾತ್ರ ಒಬ್ಬ ಸೃಜನಶೀಲ ನಿರ್ಮಾಪಕ ರಚನಾತ್ಮಕ ಸಿನಿಮಾ ಮಾಡಲು ಸಾದ್ಯ ಎಂದು ನಿರೂಪಿಸಿದ್ದಾರೆ, ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಪುಷ್ಕರ್ ಫಿಲಮ್ಸ್ ನ ಆಧಾರಸ್ತಂಭ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರು.

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನಿರ್ಮಾಣ ಮಾಡಿರುವ ಮಲಯಾಳಂ ಸಿನಿಮಾ ‘ತಿಂಗಳಾಯಿಚ ನಿಶ್ಚಯಂ’ಗೆ ಕೇರಳ ರಾಜ್ಯ ಪ್ರಶಸ್ತಿ ಪಡೆದಿದೆ. ಸೆನ್ನಾ ಹೆಗ್ಡೆ ನಿರ್ದೇಶನದ ‘ತಿಂಗಳಾಯಿಚ ನಿಶ್ಚಯಂ’, ಎರಡನೇ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ಕಥೆ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. 

ನಿರ್ದೇಶಕ ಸಿನ್ನಾ ಹೆಗ್ಡೆಯೊಂದಿಗೆ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ.

ಸಾಮಾನ್ಯವಾಗಿ ಇತರೆ ಭಾಷೆಗಳ ನಿರ್ಮಾಪಕರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವುದನ್ನು ನೋಡುತ್ತೇವೆ, ಅಂಥದ್ದರಲ್ಲಿ ಕನ್ನಡದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಲಯಾಳಂ ಸಿನಿಮಾ ಮಾಡಿ ರಾಜ್ಯಪ್ರಶಸ್ತಿಯನ್ನು ಗೆದ್ದಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ. ಪ್ರತಿಷ್ಟಿತ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ IFFKನಲ್ಲೂ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು. 

ಇತ್ತೀಚಿಗಷ್ಟೆ ನಡೆದ 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರ್ಮಾಪಕ ಪುಷ್ಕರ್ ಮತ್ತು ನಿರ್ದೇಶಕ ಸೆನ್ನಾ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲನೇ ಅತ್ಯುತ್ತಮ ಸಿನಿಮಾ ಸಿನಿಮಾ ಪ್ರಶಸ್ತಿ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಪಾಲಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಕಥೆಯೊಂದು ಶುರುವಾಗಿದೆ, ಅವನೇ ಶ್ರೀಮನ್ನಾರಾಯಣ, ಪಾಪ್ ಕಾರ್ನ್ ಮಂಕಿ ಟೈಗರ್ ಮುಂತಾದ ಸದಭಿರುಚಿಯ ಹಾಗೂ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿರುವ ಶ್ರೇಯ ಪುಷ್ಕರ್ ಅವರದು. ತಿಂಗಳಾಯಿಚ ನಿಶ್ಚಯಂ ಸಿನಿಮಾ ಕಥೆಯನ್ನು ಮೊದಲು ಕನ್ನಡದಲ್ಲಿ ಮಾಡಬೇಕಾಗಿತ್ತು, ಆದರೆ ಕಥೆಯ ಪರಿಸರ ಕೇರಳವನ್ನು ಹೋಲುತ್ತಿದ್ದುದರಿಂದ ಮಲಯಾಳಂನಲ್ಲಿ ಸಿನಿಮಾ ಮಾಡುವ ನಿರ್ಧಾರಕ್ಕೆ ಪುಷ್ಕರ್ ಮತ್ತು ಸೆನ್ನಾ ಹೆಗ್ಡೆ ಬಂದಿದ್ದರು.

ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ.

ಈ ಹಿಂದೆ ಪುಷ್ಕರ್ ನಿರ್ಮಿಸಿದ್ದ ಕಥೆಯೊಂದು ಶುರುವಾಗಿದೆ ಕನ್ನಡ ಸಿನಿಮಾವನ್ನು ಸೆನ್ನಾ ಹೆಗ್ಡೆ ಅವರು ನಿರ್ದೇಶಿಸಿದ್ದರು ಎನ್ನುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ತಾವು ಮಲಯಾಳಂ ಸಿನಿಮಾ ಮಾಡಲು ಮುಂದಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಪುಷ್ಕರ್ ನಗುತ್ತಾ ಉತ್ತರಿಸಿದ್ದು ಹೀಗೆ. ಸಿನಿಮಾಗೆ ಭಾಷೆಯ ಹಂಗಿಲ್ಲ. ಕನ್ನಡ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಬೇಕು ಎನ್ನುವುದು ತಮ್ಮ ಕನಸು ಎಂದು ತಮ್ಮ ಹಂಬಲವನ್ನು ಹಂಚಿಕೊಂಡಿದ್ದಾರೆ. 

ಒಟಿಟಿ ತಾಣವಾಗಿರುವ ಸೋನಿ ಲಿವ್ ನಲ್ಲಿ ‘ತಿಂಗಳಾಯಿಚ ನಿಶ್ಚಯಂ’ ಬಿಡುಗಡೆಯಾಗಿದ್ದು, ದೇಶಾದ್ಯಂತ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾವನ್ನು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ರೀಮೇಕ್ ಮಾಡುವ ಯೋಜನೆಯನ್ನು ಪುಷ್ಕರ್ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಬಹುನಿರೀಕ್ಷೆಯ ಅವತಾರ ಪುರುಷ ಪೋಸ್ಟರ್ ನೊಂದಿಗೆನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ

ಸದ್ಯ ಸ್ಯಾಂಡಲ್ ವುಡ್ ನಲ್ಲಿ  ಪುಷ್ಕರ್ ಫಿಲಂಸ್ ನಿರ್ಮಾಣದ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷೆಯ ಅವತಾರ ಪುರುಷ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೇ ಡಿಸೆಂಬರ್ 10 ಕ್ಕೆ ರಾಜಾದ್ಯಂತ ಬಿಡುಗಡೆ ಆಗಲಿದೆ.

****

Written By
Kannadapichhar

Leave a Reply

Your email address will not be published. Required fields are marked *