ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನ ತೊರೆದು ತಂದೆ ತಾಯಿ ಬಳಿ ಹೋಗಿ ಇಂದಿಗೆ ಮೂರು ತಿಂಗಳು. ಪುನೀತ್ ಮೂರನೇ ತಿಂಗಳ ಪುಣ್ಯ ಸ್ಮರಣೆ ಹಿನ್ನೆಲ್ಲೆಯಲ್ಲಿ,ಅಪ್ಪು ಸಮಾಧಿಗೆ ಆಗಮಿಸಿದ ಡಾ. ರಾಜ್ ಕುಟುಂಬ ಪೂಜೆ ನೆರವೇರಿಸಿತು.ಬೆಂಗಳೂರಿನಲ್ಲಿನ ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ಸಮಾಧಿಗೆ, ಇಂದು ಬೆಳಗ್ಗೆ ಪುನೀತ್ ಪತ್ನಿ, ಮಕ್ಕಳು ಹಾಗೂ ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರು ಆಗಮಿಸಿ, ಪೂಜೆ ಸಲ್ಲಿಸಿದ್ರು.
ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದ ಬಳಿಕ, ಸಮಾಧಿ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಗಿಡಗಳನ್ನ ವಿತರಿಸಿದರು. ಪುನೀತ್ ಸ್ಮಾರಕ ವೀಕ್ಷಣೆಗೆಂದು ಬಂದಿದ್ದ ಅಭಿಮಾನಿಗಳಿಗೆ ಗಿಡ ವಿತರಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಮಕ್ಕಳು, ಗಿಡವನ್ನ ನೆಡಿ, ಕಾಡನ್ನು ಬೆಳಸಿ ಇದರಿಂದ ಪುನೀತ್ ಕೂಡ ಸಂತೋಷ ಪಡ್ತಾರೆ ಅಂತ ಹೇಳಿದ್ರು.
ಪುನೀತ್ ರಾಜಕುಮಾರ್ಗೆ ಕಾಡಿನ ಬಗ್ಗೆ ಕಾಳಜಿ ಇತ್ತು, ನಮಗಾಗಿ ಪುನೀತ್ ಇಷ್ಟೆಲ್ಲಾ ನನಪುಗಳನ್ನ ಕೊಟ್ಟಿದ್ದಾರೆ, ಪರಿಸರ ಕಾಳಜಿಯ ಮಹತ್ವ ತಿಳಿಸಿಕೊಟ್ಟಿದ್ದಾರೆ, ಪುನೀತ್ಗೆ ಅಭಿಮಾನಿಗಳ ಮೂಲಕ ಏನು ವಾಪಸ್ ಕೊಡಬಹುದು ಅಂತ ಯೋಚಿಸಿದ್ವಿ,ಅಭಿಮಾನಿಗಳೆಲ್ಲ ಗಿಡ ನೆಟ್ಟು, ಕಾಡು ಬೆಳೆಸೋದಕ್ಕೆ ಸಹಕರಿಸಿದ್ರೆ ಅದುವೆ ಪುನೀತ್ಗೆ ನಾವು ನೀಡಲಾಗುವ ಉಡುಗೊರೆ. ಗಿಡಗಳಲ್ಲಿ ಆತ್ಮ ವಾಸಿಸುತ್ತೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಗಿಡಗಳ ಮೂಲಕವೇ ಅಪ್ಪು ಆತ್ಮಕ್ಕೆ ಗೌರವ ಸಲ್ಲಿಸೋ ಪಣ ತೊಟ್ಟಿದ್ದೀವಿ, ಇದಕ್ಕೆ ಅಭಿಮಾನಿಗಳು ಕೂಡ ಸಾಥ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಹಾಗಾಗಿ ಅಪ್ಪು ೩ನೇ ತಿಂಗಳ ಪುಣ್ಯ ಸ್ಮರಣೆಯ ದಿನವೇ ಇದಕ್ಕೆ ಚಾಲನೆ ನೀಡಿದ್ದೇವೆ ಅಂದ್ರು ರಾಘವೇಂದ್ರ ರಾಜ್ಕುಮಾರ್.