ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುತ್ತವೆ, ಕೆಲವು ಸಕ್ಸಸ್ ಆದ್ರೆ, ಇನ್ನು ಕೆಲವು ಒಕೆ ಅನ್ನು ಮಟ್ಟಕ್ಕೆ ತಲುಪಿರುತ್ತವೆ. ಸ್ಯಾಂಡಲ್ ವುಡ್ ನಲ್ಲಿ ‘ಕನ್ನಡ್ ಗೊತ್ತಿಲ್ಲ’ ಹೆಸರಿನ ಸಿನಿಮಾ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದ ನಿರ್ದೇಶಕ ಮಯೂರ ರಾಘವೇಂದ್ರ ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರು ಈಗ ‘ಅಬ ಜಬ ದಬ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಪೋಸ್ಟರ್ನಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಇದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಕೌತುಕ ಮೂಡಿಸಿದೆ.
ಶಂಕರ್ ನಾಗ್ ಅವರು ಮೃತಪಟ್ಟು ಅನೇಕ ದಶಕಗಳು ಕಳೆದಿವೆ. ಹೀಗಿರುವಾಗ, ‘ಅಬ ಜಬ ದಬ’ ಸಿನಿಮಾದಲ್ಲಿ ಶಂಕರ್ ನಾಗ್ ನಟಿಸೋದು ಹೇಗೆ? ಈ ಪ್ರಶ್ನೆಯನ್ನು ನಿರ್ದೇಶಕರ ಮುಂದೆ ಇಟ್ಟರೆ ಅವರು ಉತ್ತರ ನೀಡದೆ ರಹಸ್ಯ ಕಾಪಾಡಿಕೊಂಡಿದ್ದಾರೆ. ಹೀಗಾಗಿ, ಸದ್ಯಕ್ಕೆ ಈ ವಿಚಾರವನ್ನು ಅವರು ಬಿಟ್ಟುಕೊಟ್ಟಿಲ್ಲ. ಸಿನಿಮಾದ ಒಳಗೊಂದು ಸಿನಿಮಾದ ಕಥೆ ಇರುವಂತಹ ಕೌತುಕ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ನಿರ್ದೇಶಕರ ಕಡೆಯಿಂದಲೇ ಉತ್ತರ ಸಿಗಬೇಕಿದೆ.
‘ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಹೋಗಿ, ಕನ್ನಡ್ ಗೊತ್ತಿಲ್ಲ ಅಂತ ಬಂದೆವು. ಕನ್ನಡಾನೇ ಮಾತಾಡಿ ಅಂತ ಹೇಳದೆ, ಕನ್ನಡವನ್ನೂ ಮಾತನಾಡಿ ಎಂದು ಹೇಳಿದ ನನಗೆ, ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದದಿಂದ ಯಶಸ್ವಿಗೊಳಿಸಿದಿರಿ. ಇಂದು ನಿಮ್ಮ ಮುಂದೆ ಒಂದು ಹೊಸ ವಿಷಯದೊಂದಿಗೆ ನಾನು ಹಾಗೂ ನನ್ನ ತಂಡ ಬಂದಿದ್ದೇವೆ. ಒಂದು ಹೊಸ ಚಿತ್ರ, ಹೊಸ ಪ್ರಯತ್ನ’ ಎಂದಿದ್ದಾರೆ ಮಯೂರ.
‘ಚಿತ್ರದ ಶೀರ್ಷಿಕೆ ‘ಅಬ ಜಬ ದಬ’. ಇದನ್ನು ಹೊಸ ನಿರ್ಮಾಪಕ ಅನಂತ ಕೃಷ್ಣ ಅವರ ‘ಎಸ್. ರಾಮ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹಾಲಿವುಡ್ ಮಾದರಿಯಲ್ಲೇ ಸ್ಯಾಂಡಲ್ವುಡ್ ಲೋಗೋವನ್ನು ಬೆಟ್ಟದ ಮೇಲೆ ಬರೆಯಲಾಗಿದೆ ಅನ್ನೋದು ವಿಶೇಷ. ಶೀಘ್ರವೇ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ.
****