ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಮುಖ್ಯ ಮಂತ್ರಿಗಳು ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಯನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಪಡೆಯುತ್ತಿರುವ 10 ನೇ ವ್ಯಕ್ತಿ ಎಂಬ ಗೌರವಕ್ಕೆ ಪುನೀತ್ ರಾಜಕುಮಾರ್ ಪಾತ್ರರಾಗಿದ್ದಾರೆ. ‘ಪುನೀತ್ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಸಣ್ಣ ವಯಸ್ಸಿನಲ್ಲೇ ಆತ ಅದ್ಭುತವಾಗಿ ನಟಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ’ ಎಂದು ಬೊಮ್ಮಾಯಿ ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ‘ಪುನೀತ್ ರಾಜಕುಮಾರ್ ಅವರು ತೀರಿಕೊಂಡ ದಿನವೇ ನಾನು ಹೇಳಿದ್ದೆ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದ್ದೆ, ಮತ್ತೆ ಈ ಕಾರ್ಯಕ್ರಮದ ಮೂಲಕ ಹೇಳಲು ಬಯಸುತ್ತೇನೆ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯಿಸುತ್ತೇನೆ ಎಂದು ಪುನರುಚ್ಚರಿಸಿದರು.
ರಾಷ್ಟ್ರಮಟ್ಟದಲ್ಲಿ ಭಾರತ ರತ್ನ ಅತ್ಯುನ್ನತ ಪ್ರಶಸ್ತಿ ಎನಿಸಿದರೆ, ರಾಜ್ಯಮಟ್ಟದಲ್ಲಿ ಕರ್ನಾಟಕ ರತ್ನ ಅತ್ಯುನ್ನತ ಗೌರವ ಎನಿಸಿಕೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪಿಸಲಾಯಿತು. ಈವರಗೆ ಕೇವಲ 9 ಮಂದಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಮರಣೋತ್ತರವಾಗಿ ಈ ಪ್ರಶಸ್ತಿ ಪಡೆಯುತ್ತಿರುವ ಪುನೀತ್ ರಾಜ್ಕುಮಾರ್ ಈ ಗೌರವಕ್ಕೆ ಪಾತ್ರರಾದ 10ನೇ ವ್ಯಕ್ತಿಯಾಗಿದ್ದಾರೆ.
ಇದುವರೆಗೂ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಗೌರವಾನ್ವಿತರು:
ಕುವೆಂಪು (1992), ಡಾ.ರಾಜ್ಕುಮಾರ್ (1992), ಎಸ್.ನಿಜಲಿಂಗಪ್ಪ (199), ಸಿ.ಎನ್.ಆರ್.ರಾವ್ (2000), ದೇವಿ ಪ್ರಸಾದ್ ಶೆಟ್ಟಿ (2001), ಭೀಮಸೇನೆ ಜೋಷಿ (2005), ಶಿವಕುಮಾರ ಸ್ವಾಮೀಜಿ (2007), ದೇ.ಜವರೇಗೌಡ (2008), ಡಿ.ವೀರೇಂದ್ರ ಹೆಗ್ಗಡೆ (2009), ಪುನೀತ್ ರಾಜ್ಕುಮಾರ್ (2021)