ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾಹಂದರವನ್ನು ಹೊಂದಿರುವಂಥ “ಬೈ ಒನ್ ಗೆಟ್ ಒನ್ ಫ್ರೀ” ಚಿತ್ರ ಈ ವಾರ (ನ 12) ತೆರೆಗೆ ಬರುತ್ತಿದೆ. ವಿಭಿನ್ನ ಶೈಲಿಯ ಈ ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅವಳಿ ಸಹೋದರರು. ಮೈಸೂರಿನವರಾದ ಮಧು ಮಿಲನ್ ಹಾಗೂ ಮನು ಮಿಥುನ್ ಎಂಬ ಅವಳಿ ಸಹೋದರರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರವನ್ನು ಅವರೇ ನಿರ್ಮಿಸಿದ್ದಾರೆ. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಎಂಬ ಪೋಸ್ಟ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.
ಹರೀಶ್ ಅನಿಲ್ ಗಾಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಹಾರರ್ ಶೇಡ್ ಕಥೆಯಿದ್ದು, ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಕಥೆಯಲ್ಲಿ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್.
ಕಳೆದ ವಾರ ನಡೆದ ಚಿತ್ರದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರತಂಡ ಅಗಲಿದ ಪುನೀತ್ರನ್ನು ನೆನದು ಭಾವುಕವಾಯಿತು. ಆರಂಭದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್ ಈ ಒಂದೂವರೆ ವರ್ಷದಲ್ಲಿ ನಾವೆಲ್ಲ ಸುಮಾರು ಜನ ನಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ, ಹೇಗೋ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಂದು ದೊಡ್ಡ ಆಘಾತ ಬಂದೆರಗಿದೆ, ಇಡೀ ಇಂಡಸ್ಟ್ರಿಗೆ ದೊಡ್ಡ ನಷ್ಟವಾಗಿದೆ, ಸುಮಾರು ಜನರಿಗೆ ನಮಗೇ ಅಪ್ಪು ಅವರು ಉಳಿದುಕೊಳ್ಳಬಾರದಿತ್ತೇ ಅನಿಸಿದೆ, ಇದನ್ನು ಸಾಕಷ್ಟು ಜನರ ಬಾಯಲ್ಲಿ ಕೇಳಿದ್ದೇನೆ.
ಇನ್ನು “ಬೈ ಒನ್ ಗೆಟ್ಒನ್ ಫ್ರೀ” ಚಿತ್ರದ ಕುರಿತು ಹೇಳುವುದಾದರೆ ಇವರು ಮಾಡಿಕೊಂಡಿದ್ದ ಕಥೆಯೇ ತುಂಬಾ ಚೆನ್ನಾಗಿತ್ತು, ಅದರಲ್ಲಿ ಒಂದು ಪರಿಚಯದ ಮುಖ ಬೇಕಾಗಿತ್ತು, ಅದನ್ನು ನನ್ನ ಕೈಲಿ ಮಾಡಿಸಿದ್ದಾರೆ. ಮನ್ಮಥ ಎಂಬ ಪೋಸ್ಟ್ ಮ್ಯಾನ್ ಪಾತ್ರ. ಅವಳಿ ಜವಳಿ ಹುಡುಗರು ತಮ್ಮ ಹಿಂದಿನ ಕಥೆಯನ್ನು ಹುಡುಕುತ್ತಾ ಹೋದಾಗ ಅಲ್ಲೊದು ಪ್ರೀತಿ ಹುಟ್ಟಿಕೊಳ್ಳುತ್ತೆ, ಈಚೆಗೆ ಸಾವು ನೋವುಗಳ ಮಧ್ಯೆಯೂ ನಮ್ಮಲ್ಲಿ ದ್ವೇಷ ಹುಟ್ಟಿಕೊಳ್ಳುತ್ತಿದೆ, ಈ ಥರದ ದ್ವೇಷದ ವಾತಾವರಣ ದಲ್ಲಿ ಇದೊಂದು ಪ್ರೀತಿಯಕಥೆ. ಇಲ್ಲಿ ಪತ್ರಗಳನ್ನು ಸಾಗಿಸುವ ವನದ್ದೇ ಒಂದು ಪ್ರೇಮಕಥೆಯಿದೆ. ಒಂದು ಹೊಸತಂಡ, ಕಮರ್ಷಿಯಲ್ ಸಿನಿಮಾ ಮಾಡಿ ಬಿಡುಗಡೆ ಮಾಡುತ್ತಿದೆ, ಅದಕ್ಕ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.
****