ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಶೂನ್ಯ ಆವರಿಸಿದೆ. ಅಷ್ಟೇ ಅಲ್ಲದೇ ಇಡೀ ದಕ್ಷಿಣ ಭಾರತದ ಚಿತ್ರರಂಗದವೂ ಪುನೀತ್ ರಾಜಕುಮಾರ್ ಗೆ ಕಂಬನಿ ಮಿಡಿದಿದೆ. ತಮಿಳು, ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ಪುನೀತ್ ರಾಜ್ಕುಮಾರ್ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕಾಲಿವುಡ್ ನಟ ಸೂರ್ಯ ಅವರು ಇಂದು (ನ.5) ಬೆಂಗಳೂರಿಗೆ ಆಗಮಿಸಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ನಮಿಸಿ ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜ್ಕುಮಾರ್ ಮತ್ತು ಸೂರ್ಯ ನಡುವೆ ಉತ್ತಮ ಬಾಂಧವ್ಯವಿತ್ತು. ಅಗಲಿದ ಗೆಳೆಯನನ್ನು ನೆನೆದು ಅವರು ಭಾವುಕರಾದರು. ‘ಪುನೀತ್ ನಿಧನ ನ್ಯಾಯವಲ್ಲ. ಅವರಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಈ ಸುದ್ದಿ ನೋವು ನೀಡಿದೆ. ಅಣ್ಣಾವ್ರ ಕುಟುಂಬದ ಜೊತೆ ನಮ್ಮ ಕುಟುಂಬಕ್ಕೆ ಆತ್ಮೀಯತೆ ಇದೆ. ಪುನೀತ್ ನನಗಿಂತ 3 ತಿಂಗಳು ದೊಡ್ಡವರು. ಪುನೀತ್ ಸದಾ ಹಸನ್ಮುಖಿ ಆಗಿದ್ದರು. ಅವರ ಎಲ್ಲ ನೆನಪುಗಳನ್ನು ನಗುವಿನೊಂದಿಗೆ ಇಟ್ಟುಕೊಳ್ಳೋಣ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದು ಸೂರ್ಯ ಹೇಳಿದ್ದಾರೆ.
‘ಪುನೀತ್ ಅವರನ್ನು ನಾವು ತುಂಬ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ’ ಎಂದು ಸೂರ್ಯ ಕಣ್ಣೀರು ಹಾಕಿದ್ದಾರೆ. ಈ ವೇಳೆ ಶಿವಣ್ಣ ಕೂಡ ಜೊತೆಗಿದ್ದರು.
****