ರಾಜ್.ಬಿ.ಶೆಟ್ಟಿ ಈಗಾಗಲೇ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮುಖಾಂತರ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಅವರ ನಿರ್ದೇಶನದ ಎರಡನೇ ಚಿತ್ರ ‘ಗರುಡ ಗಮನ ವೃಷಭ ವಾಹನ’ವು ಈಗಾಗಲೇ ತನ್ನ ಶೀರ್ಷಿಕೆ ಹಾಗೂ ಪೋಸ್ಟರ್ನಿಂದ ಗಮನ ಸೆಳೆದಿದೆ. ಈ ಚಿತ್ರದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಂದು ಪಾತ್ರದಲ್ಲಿ ರಾಜ್.ಬಿ.ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇದೀಗ ಚಿತ್ರತಂಡ ಹೊಸ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ 15ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಪರಂವಃ ಸ್ಟುಡಿಯೋಸ್ ಟ್ವಿಟರ್ ಖಾತೆಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘ಅಕ್ಟೋಬರ್ 15ರಂದು ಶಿವ ಮತ್ತು ಹರಿಯ ಪ್ರಪಂಚವನ್ನು ತೆರೆದಿಡಲಾಗುವುದು’ ಎಂದು ತಿಳಿಸಲಾಗಿದೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ಪರಂವಃ ಪಿಚ್ಚರ್ಸ್ ಮುಖಾಂತರ ಪ್ರಸ್ತುತಪಡಿಸುವುದಾಗಿ ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದರು.
****