News

‘2020 ಗೋಪಿಕೆಯರು’ ಚಿತ್ರದ ಆಡಿಯೋ ರಿಲೀಸ್ ಮಾಡಿದ ಪೊಲೀಸ್ ಅಧಿಕಾರಿ!

‘2020 ಗೋಪಿಕೆಯರು’ ಚಿತ್ರದ ಆಡಿಯೋ ರಿಲೀಸ್ ಮಾಡಿದ ಪೊಲೀಸ್ ಅಧಿಕಾರಿ!
  • PublishedNovember 26, 2021

‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ, ಡಿಸೆಂಬರ್ 10 ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಲಾಜಿ ಶರ್ಮಾ, ಪ್ರಿಯಾಂಕಾ ಚಿಂಚೋಳಿ, ನಂದೀಶ್‌ ಕಾಣಿಸಿಕೊಂಡಿದ್ದಾರೆ. ‘ಮನಸಾರೆ’, ‘ಮನಸೆಲ್ಲಾ ನೀನೆ’, ‘ಹರ ಹರ ಮಹಾದೇವ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಪ್ರಿಯಾಂಕಾಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾವನ್ನು ಕುಚ್ಚಣ್ಣ ಶ್ರೀನಿವಾಸ್‌ ನಿರ್ಮಾಣ ಮಾಡಿದ್ದಾರೆ. ಈಚೆಗೆ ಈ ಸಿನಿಮಾದ ಹಾಡುಗಳನ್ನು ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ ಬಿಡುಗಡೆ ಮಾಡಿದ್ದಾರೆ.

ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ, ಮೊದಲಿಗೆ ಪುನೀತ್‌ ರಾಜ್‌ಕುಮಾರ್ ಅವರನ್ನು ನೆನೆದು ಭಾವುಕರಾದರು. ನಂತರ ಚಿತ್ರದ ಬಗ್ಗೆ ಮಾತನಾಡಿದ ಅವರು, ‘ನನ್ನ ಸೀನಿಯರ್ ಆದ ಕುಚ್ಚಣ್ಣ ಶ್ರೀನಿವಾಸ್ ಅವರು ನನಗೆ ಸಿನಿಮಾ ನಿರ್ಮಾಣದ ಬಗ್ಗೆ ತಿಳಿಸಿದ್ದರು. ಈಗ ಆಡಿಯೋ ಬಿಡುಗಡೆಗೆ ನನ್ನ ಆಹ್ವಾನಿಸಿದಾಗ, ಈ ಚಿತ್ರ ಬಿಡುಗಡೆ ಹಂತಕ್ಕೆ ಬಂದಿರುವ ಸುದ್ದಿ ತಿಳಿದು ಸಂತೋಷವಾಯಿತು. ಮಲಯಾಳಂ, ತಮಿಳು ಭಾಷೆಗಳಲ್ಲಿ ಕಡಿಮೆ ದುಡ್ಡು ಖರ್ಚು ಮಾಡಿ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಅಲ್ಲಿ ಆ ಚಿತ್ರಗಳು ಯಶಸ್ವಿಯಾಗಿದ್ದುಂಟು. ಈ ಚಿತ್ರದ ಬಗ್ಗೆ ಕೇಳಿದಾಗ ನನಗೂ ಉತ್ತಮವಾದ ಕಥೆಯುಳ್ಳ ಚಿತ್ರ ಎನಿಸುತ್ತಿದೆ. ನಾವು ಕೂಡ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಇಲ್ಲವಾದಲ್ಲಿ ಕೆಟ್ಟ ಚಿತ್ರಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಚಿತ್ರದ ಹಾಡುಗಳನ್ನು ಕೇಳಿದಾಗ ಕಿವಿಗೆ ಇಂಪಾಯಿತು.‌ ಶ್ರೀಧರ್ ಒಳ್ಳೆಯ ಸಂಗೀತ ನೀಡಿದ್ದಾರೆ. ಚಿತ್ರ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.

ನಂತರ ಮಾತನಾಡಿದ ಕುಚ್ಚಣ್ಣ ಶ್ರೀನಿವಾಸ್‌, ‘ಚಿತ್ರ ಮಾಡುವ ನಿಟ್ಟಿನಲ್ಲಿ ಮೂರು ಪ್ರಮುಖ ಹಂತಗಳಿರುತ್ತವೆ. ಮೊದಲನೆಯದು ಬರವಣಿಗೆಯ ಹಂತ. ಚಿತ್ರಕಥೆ ಎನ್ನುವುದು ಸವಾಲಿನ ಕೆಲಸ. ಏಕಾಂಗಿಯಾಗಿ ಚಿತ್ರಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ. ಬರೆದೂ ಇಲ್ಲ ಎಂಬುದು ನನ್ನ ನಂಬಿಕೆ. ಗುಂಪಿನಲ್ಲಿ ಚರ್ಚೆ ಮಾಡಿಕೊಂಡು, ಮಾತಾಡಿಕೊಂಡು ಮಾಡುವ ಕ್ರಿಯೆ ಅದು. ನಾನು, ನಮ್ಮ ಚಿತ್ರದ ನಿರ್ದೇಶಕ ನಾರಾಯಣಸ್ವಾಮಿ ಒಂದೂವರೆ ವರ್ಷಗಳ ಕಾಲ ಚಿತ್ರಕಥೆ ಮಾಡಿದ್ದೇವೆ. ಎರಡನೆಯ ಹಂತ ಚಿತ್ರೀಕರಣ. ಹಾಗೆಯೇ, ಮೂರನೆಯ ಹಂತ ಹಾಡುಗಳಿಗೆ ಸಂಗೀತ ಅಳವಡಿಸುವುದು. ಯಾವುದೇ ಚಿತ್ರದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕಾದರೆ ಒತ್ತಾಸೆಯಾಗಿ ಸಂಗೀತ ಇರಬೇಕಾಗುತ್ತದೆ. ಸಿನಿಮಾಗಳಲ್ಲಿ ಸಂಗೀತ ಪ್ರಧಾನ ಪಾತ್ರ ವಹಿಸುತ್ತದೆ. ನನಗೆ ವೈಯಕ್ತಿಕವಾಗಿ ಈ ಮೂರನೆಯ ಹಂತ ಬಹಳ ಇಷ್ಟದ್ದು. ಮೂರು ಹಾಡುಗಳು ನಮ್ಮ ಚಿತ್ರದಲ್ಲಿದೆ’ ಎಂದರು.
‘ಹಾಡು ಎಂದರೆ ಬರೀ ಸಂಗೀತವಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ ಸಾಹಿತ್ಯ ಬೇಕು. ಅದು ಅದ್ಭುತ ಪ್ರಕ್ರಿಯೆ. ದೊಡ್ಡ ದೊಡ್ಡ ಕವಿಗಳು ಚಿತ್ರಗೀತೆ ಬರೆಯುವುದಕ್ಕೆ ಹೋಗಿ ಕಷ್ಟಪಟ್ಟಿದ್ದನ್ನು ನಾವು ನೋಡಿದ್ದೇವೆ. ಕಥೆಗೆ, ಸನ್ನಿವೇಶಕ್ಕೆ ಮತ್ತು ನಿರ್ದೇಶಕರ ಕಲ್ಪನೆಗೆ ತಕ್ಕ ಹಾಗೆ ಹಾಡುಗಳನ್ನು ಬರೆಯುವುದು ಸುಲಭವಲ್ಲ. ಹೃದಯಶಿವ, ಗೌಸ್ಪೀರ್ ಮತ್ತು ಮಹೇಂದ್ರ ಗೌಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಶ್ರೀಧರ್ ಸಂಗೀತ ಸಂಯೋಜಕರಷ್ಟೇ ಅಲ್ಲ, ಒಳ್ಳೆಯ ಸಾಹಿತ್ಯ ಅಭಿರುಚಿ ಹೊಂದಿದ್ದಾರೆ. ಸಾಹಿತ್ಯವು ಸಂಗೀತಕ್ಕೆ ಹೊಂದುತ್ತದೋ ಇಲ್ಲವೋ ಎಂಬುದನ್ನು ಅವರು ಚೆನ್ನಾಗಿ ಜಡ್ಜ್ ಮಾಡುತ್ತಾರೆ’ ಎಂದು ಕುಚ್ಚಣ್ಣ ಶ್ರೀನಿವಾಸ್‌ ಹೇಳಿದರು.

ನಂತರ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ ಅವರ ಬಗ್ಗೆ ಕುಚ್ಚಣ್ಣ ಶ್ರೀನಿವಾಸ್‌ ಮಾತನಾಡಿದರು. ‘ರವಿಕಾಂತೇ ಗೌಡ ಓರ್ವ ಪೊಲೀಸ್ ಅಧಿಕಾರಿ ಮಾತ್ರವಲ್ಲ. ಅವರೊಬ್ಬ ಸಾಹಿತಿ. ಅವರ ತಂದೆ ಬೆಸಗರಹಳ್ಳಿ ರಾಮಣ್ಣ ಕನ್ನಡದ ಜನಪ್ರಿಯ ಕಥೆಗಾರ. ಇವರು ಸಹ ಸಾಹಿತ್ಯ ರಚಿಸಿದ್ದಾರೆ. ಬಹುಶಃ ನಿವೃತ್ತಿಗಾಗಿ ಕಾಯುತ್ತಿದ್ದಾರೆ ಅಂದುಕೊಂಡಿದ್ದೇನೆ. ಆಮೇಲೆ ಅವರ ಹಲವು ಪುಸ್ತಕಗಳು ಪ್ರಕಟವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಅವರಿಗೆ ಆಹ್ವಾನ ಕಳಿಸಿದಾಗ, ವಾಟ್ಸಾಪ್ನಲ್ಲೇ ಕವನ ಕಳಿಸಿದರು. ಬಹಳ ಖುಷಿಯಾಯಿತು. ಒಳ್ಳೆಯ ಸಾಲುಗಳಿವೆ. ಅವರು ಇಂದು ಮುಖ್ಯ ಅತಿಥಿಯಾಗಿ ಬಂದಿರುವುದು ಸಂತೋಷ’ ಎಂದರು ಕುಚ್ಚಣ್ಣ ಶ್ರೀನಿವಾಸ್‌.

****

Written By
Kannadapichhar

Leave a Reply

Your email address will not be published. Required fields are marked *