News

ಮೈಸೂರಿನಲ್ಲಿ ‘ಸಲಗ’ ಚಿತ್ರದ ಅನುಭವ ಹಂಚಿಕೊಂಡ ಬಾಲ ಪ್ರತಿಭೆಗಳು..!

ಮೈಸೂರಿನಲ್ಲಿ ‘ಸಲಗ’ ಚಿತ್ರದ ಅನುಭವ ಹಂಚಿಕೊಂಡ ಬಾಲ ಪ್ರತಿಭೆಗಳು..!
  • PublishedOctober 28, 2021

ಸಲಗ ಸಿನಿಮಾದ ಮೂಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿರುವ ಮೈಸೂರು ಭಾಗದ ಬಾಲ ಪ್ರತಿಭೆಗಳನ್ನು ಪರಿಚಯಿಸುವ ಉಮೇದು ಚಿತ್ರದ ನಿರ್ದೇಶಕ, ನಾಯಕ ನಟರೂ ಆದ ದುನಿಯಾ ವಿಜಯ್ ಅವರದ್ದು. ಮೈಕ್‌ ಹಿಡಿದ ಕಲಾವಿದರು ಚಿತ್ರದೊಂದಿಗಿನ ಒಡನಾಟ, ಆತಿಥ್ಯದ ಅನುಭವವನ್ನು ಖುಷಿಯಿಂದಲೇ ಹಂಚಿಕೊಂಡರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಡುಬಂದ ಚಿತ್ರಣವಿದು. ಚಿತ್ರದಲ್ಲಿ ಜೂನಿಯರ್‌ ಸಲಗನಾಗಿ ಮೈಸೂರಿನ ನಟನ ರಂಗಶಾಲೆಯ ಶ್ರೀಧರ ಅಭಿನಯಿಸಿದ್ದಾರೆ. ‘ನನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ. ನಿರ್ದೇಶಕರು ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ನಮಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡರು’ ಎಂದರು.

ಚಿತ್ರದಲ್ಲಿ ಆಟೊ ಚಾಲಕನ ಮಗಳಾಗಿ ಕಾಣಿಸಿಕೊಂಡಿರುವ ಸುಚರಿತಾ ಮಾತನಾಡಿ, ‘ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯವಿದ್ದು, ನನ್ನ ಅಭಿನಯವನ್ನು ನೋಡಿ ವಿಜಿ ಸರ್ ಕಣ್ಣಲ್ಲಿ ನೀರು ಬಂತು. ಚಿತ್ರಮಂದಿರದಲ್ಲೂ ಜನರು ಕಣ್ಣೀರು ಹಾಕಿದ್ದಾರೆ’ ಎಂದು ಸ್ಮರಿಸಿದರು.

ಜೂನಿಯರ್‌ ಸಲಗನ ಸ್ನೇಹಿತನಾಗಿ ಅಭಿನಯಿಸಿರುವ ಸಂತೋಷ್‌, ‘ಸೆಟ್‌ನಲ್ಲಿ ತುಂಬಾ ಕಾಮಿಡಿ ಇತ್ತು. ವಿಜಿ ಸರ್ ಹೀರೋ ರೀತಿ ನಡೆದುಕೊಳ್ಳದೆ, ಪ್ರೀತಿ, ವಿಶ್ವಾಸದಿಂದ ನೋಡಿಕೊಂಡರು’ ಎಂದರು. ಕಲಾವಿದರಾದ ಕಾರ್ತಿಕ್‌, ಅನಿಲ್‌, ಶಿವಮೋಹನ್‌, ಕೋಹನಾ, ರಮ್ಯಾ ತಮ್ಮ ಅನುಭವ ಹಂಚಿಕೊಂಡರು.

ದುನಿಯಾ ವಿಜಯ್‌ ಮಾತನಾಡಿ, ‘ನ.1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಸಂಗಂ, ಗಾಯತ್ರಿ ಚಿತ್ರ ಮಂದಿರಕ್ಕೆ ಚಿತ್ರ ತಂಡ ಭೇಟಿ ನೀಡಲಿದೆ. ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡಲಾಗುವುದು’ ಎಂದರು. ‘ಸಲಗ’ ಚಿತ್ರವು ರಾಜ್ಯದಾದ್ಯಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ನಿರೀಕ್ಷೆ ಮೀರಿ ಯಶಸ್ಸು ಕಾಣುತ್ತಿದೆ. ಇದಕ್ಕೆ ಅನೇಕರ ಕೊಡುಗೆ ಇದೆ. ಮೈಸೂರು ಭಾಗದ ಈ ಕಲಾವಿದರ ಪಾಲೂ ಇದೆ’ ಎಂದು ಹೇಳಿದರು.

****

Written By
Kannadapichhar

Leave a Reply

Your email address will not be published. Required fields are marked *