ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿಯನ್ನು ಭೇಟಿ ಮಾಡಿದ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಇಬ್ಬರ ಭೇಟಿ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿತ್ತು ಆದರೆ ಇದೊಂದು ಪ್ರೀತಿಯ ಮತ್ತು ಸೌಹಾರ್ಧಯುತ ಭೇಟಿ ಎಂದು ಹೇಳಲಾಗಿದೆ.

ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಮೊದಲಿನಿಂದಲೂ ಆಪ್ತರು. ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಟ್ವೀಟ್ ಮಾಡಿದ್ದ ಸುದೀಪ್, ”ನಿಮ್ಮ ಸರಳತೆ ನೋಡಿ ಬೆಳೆದವನು ನಾನು. ನನ್ನ ಆರಂಭಿಕ ದಿನಗಳಲ್ಲಿ ನನಗೆ ಬೆಂಬಲವಾಗಿದ್ದವರು ನೀವು. ನಿಮಗೆ ಒಳ್ಳೆಯದಾಗಲಿ ಮಾಮ” ಎಂದು ಹಾರೈಸಿದ್ದರು ಈಗ ಅವರನ್ನು ಮತ್ತೆ ಭೇಟಿಯಾಗಿದ್ದು, ಆ ಫೋಟೋ ವೈರಲ್ ಆಗುತ್ತಿದೆ. ಅಂದಹಾಗೆ, ಕಿಚ್ಚನ ಜನ್ಮದಿನ ಹತ್ತಿರವಾಗುತ್ತಿದೆ. ಸೆ.2 ರಂದು ಅವರ ಹುಟ್ಟುಹಬ್ಬ. ಆದರೆ ಕೊರೊನಾ ಕಾರಣದಿಂದ ಅವರು ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಇತ್ತೀಚೆಗೆ ‘ಕಿಚ್ಚ ಕ್ರಿಯೇಷನ್’ ಟ್ವಿಟರ್ ಖಾತೆ ಮೂಲಕ ಮಾಹಿತಿ ನೀಡಲಾಗಿತ್ತು.
ಕಿಚ್ಚ ಸುದೀಪ್ ಅವರು ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಕೊರೋನಾ ಸಮಯದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿರುವ ಕಿಚ್ಚ ಸುದೀಪ್ ಶಾಲೆಗಳನ್ನು ದತ್ತು ಪಡೆದು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.
****