ಬಿಡುಗಡೆ ಆಯ್ತು ‘ಒಂಬತ್ತನೇ ದಿಕ್ಕು’ ಚಿತ್ರದ ಟ್ರೈಲರ್!
ಲೂಸ್ ಮಾದ ಯೋಗಿ ನಾಯಕನಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿರುವ ‘ಒಂಬತ್ತನೇ ದಿಕ್ಕು’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿದೆ. ವಿಶಿಷ್ಟ ರೀತಿಯ ಚಿತ್ರಗಳನ್ನು ನಿರ್ದೇಶಿಸಿ ಹೆಸರಾದ ಪ್ರಸ್ತುತ ದಯಾಳ್ ಪದ್ಮನಾಭನ್ ‘ಒಂಭತ್ತನೇ ದಿಕ್ಕು’ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಟ್ರೇಲರ್ಗೆ ಮೆಚ್ಚುಗೆ ಸಿಕ್ಕಿದೆ. ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಟ್ರೇಲರ್ ಬಿಡುಗಡೆ ಸಮಾರಂಭಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

“ನನ್ನ ನಿರ್ದೇಶನದ ಹತ್ತೊಂಭತ್ತನೆಯ ಚಿತ್ರವಿದು. ಕಳೆದ ಕೆಲವು ವರ್ಷಗಳಿಂದ ನಾನು ಹಗ್ಗದ ಕೊನೆ, ಆ ಕರಾಳ ರಾತ್ರಿ, ರಂಗನಾಯಕಿಯಂತಹ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೀನಿ. ಈಗ ಆಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ದೇಶಿಸಿದ್ದೇನೆ. ಅದೇ ‘ಒಂಭತ್ತನೇ ದಿಕ್ಕು’. ಈ ಚಿತ್ರದ ಕಥೆ ಎರಡು ಟೈಮ್ ಲೈನ್ನಲ್ಲಿ ಸಾಗುತ್ತದೆ.
ನಮಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ್ದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ” ಎಂದಿದ್ದಾರೆ ದಯಾಳ್ ಪದ್ಮನಾಭನ್.
****