News

“ಅಮೃತ ಅಪಾರ್ಟ್ಮೆಂಟ್” ವಿಭಿನ್ನ ಕಥೆಯೊಂದಿಗೆ ನವೆಂಬರ್ 26 ಕ್ಕೆ ತೆರೆಗೆ!

“ಅಮೃತ ಅಪಾರ್ಟ್ಮೆಂಟ್” ವಿಭಿನ್ನ ಕಥೆಯೊಂದಿಗೆ ನವೆಂಬರ್ 26 ಕ್ಕೆ ತೆರೆಗೆ!
  • PublishedNovember 22, 2021

ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಗುರುರಾಜ ಕುಲಕರ್ಣಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಅಮೃತ ಅಪಾರ್ಟ್‌ಮೆಂಟ್ಸ್‌’ ಸಿನಿಮಾ ನವೆಂಬರ್ 26ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.

ಅಮೃತ ಅಪಾರ್ಟ್‌ಮೆಂಟ್ಸ್‌ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾ. ಚಿತ್ರದ ಹಾಡು ಟೀಸರ್, ಟ್ರೇಲರ್ ನೋಡಿದವರಿಗೆ ಸಿನಿಮಾ ಮೇಲೆ ಒಂದು ನಿರೀಕ್ಷೆ ಈಗಾಗಲೇ ಚಿಗುರಿದೆ. ಭರವಸೆ ಮೂಡಿಸುವಂತ ಕಟೆಂಟ್ ಇದೆ ಎಂಬ ಅರಿವೂ ಆಗಿದೆ. ಆದ್ರಿಂದ ಸಿನಿಮಾವನ್ನೊಮ್ಮೆ ನೋಡಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಗುರುರಾಜ ಕುಲಕರ್ಣಿ ಈ ಚಿತ್ರದ ಸೂತ್ರಧಾರಿ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಷ್ಟಕ್ಕೆ ನಿಂತಿಲ್ಲ ನಿರ್ಮಾಣದ ನೊಗವನ್ನು ಇವರೇ ಹೊತ್ತಿದ್ದಾರೆ. ಒಂದು ರೀತಿ ಒನ್ ಮ್ಯಾನ್ ಆರ್ಮಿಯಾಗಿ ಸಿನಿಮಾವನ್ನು ನಿಭಾಯಿಸಿದ್ದಾರೆ. ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸಾಲು ಸಾಲು ಬಂದಿವೆ. ಇದರಲ್ಲೇನು ವಿಶೇಷ ಅಂದ್ರೆ ವಿಶೇಷತೆ ಹಲವು ಅನ್ನುತ್ತೆ ಚಿತ್ರತಂಡ. ಇಲ್ಲಿ ಪ್ರತಿಯೊಬ್ಬ ಬೆಂಗಳೂರಿಗನ ಕಥೆಯಿದೆ, ಬೆಂಗಳೂರಿನಲ್ಲಿ ಚಿಗುರೊಡೆಯೋ ಪ್ರೀತಿಕಥೆಯಿದೆ, ಭಾವನೆಗಳಿವೆ, ರಿಯಾಲಿಸ್ಟಿಕ್ ಜೀವನಕ್ಕೆ ಹತ್ತಿರವಾದ ಹಲವು ಸಂಗತಿಗಳಿವೆ ಎನ್ನುವುದು ಚಿತ್ರತಂಡದ ಉತ್ತರ.

ಬೆಂಗಳೂರು ಬಹು ಭಾಷೆಯ, ಬಹು ಸಂಸ್ಕೃತಿಯ ಆಗರ ಇಂತಹದ್ದೊಂದು ಊರಲ್ಲಿ ಸಾಮಾನ್ಯವಾಗಿ ಘಟಿಸುವ ಘಟನೆಯನ್ನು ಸಿನಿಮ್ಯಾಟಿಕ್ ಟಚ್ ಕೊಟ್ಟು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ನಿರ್ದೇಶಕರು. ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ, ದೇಶಗಳಿಂದ ಜನರು ಇಲ್ಲಿಗೆ ಬರ್ತಾನೆ ಇರ್ತಾರೆ. ಹೀಗೆ ಬೇರೆ ಪ್ರದೇಶದ, ಬೇರೆ ಸಂಸ್ಕೃತಿಯ ನಾಯಕ ನಾಯಕಿ ನಡುವೆ ಚಿಗುರೊಡೆಯೋ ಪ್ರೀತಿ ಕಥೆಯೇ ಅಮೃತ ಅಪಾರ್ಟ್ ಮೆಂಟ್ಸ್. ಈ ಪ್ರೀತಿ ಮುಂದೆ ಯಾವೆಲ್ಲ ತಿರುವು ಪಡೆಯುತ್ತೆ, ಇಬ್ಬರೂ ಒಂದಾಗಿ ಇರ್ತಾರ ಎನ್ನುವುದೇ ಅಮೃತ್ ಅಪಾರ್ಟ್‌ಮೆಂಟ್ಸ್‌ ಒನ್ ಲೈನ್ ಕಹಾನಿ. 

ಕೆಜಿಎಫ್, ಯುವರತ್ನ ಸಿನಿಮಾಗಳ ಮೂಲಕ ಮುನ್ನೆಲೆಗೆ ಬಂದಿರುವ, ವಿಲನ್ ಪಾತ್ರಗಳಲ್ಲಿ ಮಿಂಚಿರುವ ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಸಿಗಲಿದ್ದಾರೆ. ಇವರಿಗೆ ನಾಯಕಿಯಾಗಿ ಊರ್ವಶಿ ಗೋವರ್ಧನ್ ಬಣ್ಣ ಹಚ್ಚಿದ್ದಾರೆ. ಚಿತ್ರದ ಕಥೆಗೆ ತಕ್ಕಂತೆ ಸಿನಿಮಾದಲ್ಲಿನ ಪೋಷಕ ಪಾತ್ರಗಳು ಕೂಡ ಅಷ್ಟೇ ಎಫೆಕ್ಟಿವ್ ಆಗಿದ್ದು, ಪ್ರತಿಭಾವಂತ ನಟ ಬಾಲಾಜಿ ಮನೋಹರ್, ಸಂಪತ್ ಮೈತ್ರೇಯ, ಮಾನಸ ಜೋಶಿ, ಸೀತಾ ಕೋಟೆ, ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ. ಉಳಿದಂತೆ ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ್ ಜಾಲಾ, ರಂಗಸ್ವಾಮಿ ಒಳಗೊಂಡ ರಂಗಭೂಮಿ ಕಲಾವಿದರ ದಂಡು ಚಿತ್ರದಲ್ಲಿದೆ.

ಖ್ಯಾತ ಸಂಕಲನಕಾರ ಬಿ.ಎಸ್.ಕೆಂಪರಾಜು ಸಂಕಲನ ಚಿತ್ರಕ್ಕಿದ್ದು, ಅರ್ಜುನ್ ಅಜಿತ್ ಕ್ಯಾಮೆರಾ ವರ್ಕ್, ಎಸ್.ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ-9 ಕಮ್ಯನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಿದ್ದು, ನವೆಂಬರ್ 26ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *