News

ಇಂದು (ನ.8) ‘ಪುನೀತ್ ರಾಜಕುಮಾರ್’ ಪುಣ್ಯ ಸ್ಮರಣೆ

ಇಂದು (ನ.8) ‘ಪುನೀತ್ ರಾಜಕುಮಾರ್’ ಪುಣ್ಯ ಸ್ಮರಣೆ
  • PublishedNovember 8, 2021

ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಇಂದಿಗೆ (ನ.8) ಅವರು ನಿಧನರಾಗಿ 11 ದಿನಗಳು ತುಂಬಲಿದ್ದು, ಕುಟುಂಬದಿಂದ 11ನೇ ದಿನ ಕಾರ್ಯವನ್ನು ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಏರ್ಪಾಡುಗಳನ್ನು ಮಾಡಲಾಗಿದೆ. ಕಂಠೀರವ ಸ್ಟುಡಿಯೋಕ್ಕೆ ಬೆಳಗ್ಗೆ 10 ಗಂಟೆಗೆ ಪುನೀತ್ ಕುಟುಂಬಸ್ಥರು ಭೇಟಿ ನೀಡಿ, ಪೂಜೆ ಸಲ್ಲಿಸಲಿದ್ದಾರೆ. ಇನ್ನು, ಮಂಗಳವಾರ (ನ.9) ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಕೂಡ ಏರ್ಪಡಿಸಲಾಗಿದೆ.

ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ ಕ್ಷಣದಿಂದಲೂ ಎಲ್ಲವನ್ನೂ ಅಚ್ಚಕಟ್ಟಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದೇ ರೀತಿ ಇಂದು ಕೂಡ 11ನೇ ದಿನದ ಕಾರ್ಯವನ್ನು ಕುಟುಂಬದವರು ನೆರವೇರಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಪುನೀತ್​ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯ ಆರಂಭ ಆಗಿದೆ.

ಮನೆಯನ್ನು ಹೂವಿನಿಂದ ಸಿಂಗರಿಸಲಾಗಿದೆ. ಮನೆ ಎದುರು ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ. 10 ಗಂಟೆ ಸುಮಾರಿಗೆ ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಬರಲಿದ್ದಾರೆ. ಪುನೀತ್​ ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ಪ್ರತಿದಿನ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಜನರು ಕಿಲೋ ಮೀಟರ್​ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ದಿನವೂ ಕಂಡು ಬರುತ್ತಿದೆ. ಇಂದು 11ನೇ ದಿನದ ಕಾರ್ಯವಾದ್ದರಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನ 12 ಗಂಟೆಯವರೆಗೆ ಕಂಠೀರವ ಸ್ಟುಡಿಯೋ ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 12 ಗಂಟೆ ಬಳಿಕ ಅಪ್ಪು ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ಸಿಗಲಿದೆ.

****

Written By
Kannadapichhar

Leave a Reply

Your email address will not be published. Required fields are marked *