ಅಮಾನವೀಯ ಘಟನೆಗೆ ಮಿಡಿದ ಬಾಲಿವುಡ್ ಹೃದಯ: ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಿ.ಎಂ.ಗೆ ಮನವಿ
ಕರ್ನಾಟಕದಲ್ಲಿ ನಡೆದಿರುವ ಅಮಾನವೀಯ ಘಟನೆಗೆ ಬಾಲಿವುಡ್ ಹೃದಯ ಮಿಡಿದಿದೆ. ಹೌದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಆಗಿರುವ ಘಟನೆಗೆ ಬಾಲಿವುಡ್ ನಟ ರಣದೀಪ್ ಹೂಡ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಬುಧವಾರ ನಡೆದಿದ್ದು ಸರಿ ಸುಮಾರು 60 ಕೋತಿಗಳಿಗೆ ವಿಷಹಾಕಿ ಕೊಲ್ಲಲಾಗಿತ್ತು. ಸತ್ತ ಕೋತಿಗಳ ಮೃತ ದೇಹಗಳನ್ನು ಬೇಗೂರು ಬಳಿ ರಸ್ತೆಯಲ್ಲಿ ಬಿಸಾಕಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ರಣದೀಪ್ ಹೂಡ ಇದೊಂದು ಅತ್ಯಂತ ಹೇಯವಾದ ಘಟನೆ. 60ಕ್ಕೂ ಹೆಚ್ಚು ಕೋತಿಗಳಿಗೆ ವಿಷ ನೀಡಿ ಕೊಂದು ಅವುಗಳನ್ನು ಚೀಲದಲ್ಲಿ ಹಾಕಿ ಸಕಲೇಶಪುರದ ರಸ್ತೆಯಲ್ಲಿ ಬಿಸಾಡಲಾಗಿದೆ” ಎಂದು ಘಟನೆಯನ್ನು ಖಂಡಿಸಿದ್ದಾರೆ.

ಈ ರೀತಿ ಕ್ರೌರ್ಯ ಮೆರೆದವರಿಗೆ ಸೂಕ್ತ ಶಿಕ್ಷೆ ನೀಡಿ ಎಂದು ಮನವಿ ಮಾಡಿರುವ ನಟ ಕೇಂದ್ರ ಅರಣ್ಯ ಮಂತ್ರಿ ಸೇರಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬಸವರಾಜ ಬೊಮ್ಮಾಯಿಯವರಿಗೆ, ರಾಜ್ಯ ಅರಣ್ಯ ಇಲಾಖೆಗೆ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಈಗಾಗಲೇ ಆ ಘಟನೆ ಕುರಿತು ಪ್ರಕರಣ ದಾಖಲಿಸಿ ತಪ್ಪಿತಸ್ಥರ ಸೆರೆಗೆ ತನಿಖೆ ಮಾಡಲಾಗುತ್ತಿದೆ.
ಪರಿಸರ ಹಾಗೂ ಪ್ರಾಣಿ ಪ್ರೇಮಿಯಾಗಿರುವ ಬಾಲಿವುಡ್ ನಟ ರಣದೀಪ್ ಹೂಡ ಸಾಮಾಜಿಕ ಜಾಲತಾಣಗಳ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನೆಲದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಗೆ ಬಾಲಿವುಡ್ ಸದಸ್ಯನ ಸ್ಪಂದನೆ ಮೆಚ್ಚುಗೆ ಪಾತ್ರವಾಗಿದೆ. ಮಾನವೀಯತೆಗೆ ಯಾವುದೇ ಗಡಿಯ ಎಲ್ಲೆಗಳಿಲ್ಲ ಎಂಬುದಕ್ಕೆ ಇದುವೆ ಸಾಕ್ಷಿಯಾಗಿದೆ.
**